ಕೊಪ್ಪಳ : ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನವನ್ನು ಹಿಂಪಡೆಯುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು,ವಿದ್ಯಾರ್ಥಿಗಳು ಜಿಲ್ಲಾ ಆಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಚುನಾವಣೆ ವಿಭಾಗದ ತಹಶೀಲ್ದಾರ್ ರವಿ ವಸ್ತ್ರದ್ ಅವರ ಮೂಲಕ ಮನವಿ ಸಲ್ಲಿಸಲಾಯಿತು
ಈ ಮನವಿ ಪತ್ರದಲ್ಲಿ ಒತ್ತಾಯಪೂರ್ವಕವಾಗಿ ಆಗ್ರಹಪಡಿಸುವುದೇನೆಂದರೆ, ಹಿಂದಿನ ಬಿಜೆಪಿ ಸರಕಾರ ಸ್ಥಾಪಿಸಿದ ವಿಶ್ವವಿದ್ಯಾಲಯಗಳನ್ನು ಮುಂದುವರೆಸಿಕೊಂಡು ಹೋಗದೆ ಇರುವುದು ವಿಷಾದನೀಯ. ಯು.ಜಿ.ಸಿ ಪ್ರಕಾರ ಎರಡು ಜಿಲ್ಲೆಗೆ ಒಂದರಂತ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಹೆಚ್ಚಿನ ಉನ್ನತ ಶಿಕ್ಷಣವನ್ನು ಕೆಳಹಂತಕ್ಕೆ ಒಯ್ಯಬೇಕೆಂಬ ಆಶಯಕ್ಕೆ ನಿಮ್ಮ ಈ ನಡೆ ವಿರೋಧವಾಗಿದೆ. ಕಲ್ಯಾಣ ಕರ್ನಾಟಕ/ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾಗಿದೆ,ಆ ಕಾರಣಕ್ಕಾಗಿ ನಂಜುಂಡಪ್ಪ ವರದಿ ಜಾರಿಯಾಯಿತು.ಮತ್ತು ಸಂವಿಧಾನದ 371 (ಜೆ) ನೇ ಕಲಂ ಕೂಡ ಜಾರಿಯಾಯಿತು. ಕಲ್ಯಾಣ ಕರ್ನಾಟಕದ ಬೀದರ ವಿಶ್ವವಿದ್ಯಾಲಯ ಉಳಿಸಿಕೊಂಡಂತೆ, ಶೈಕ್ಷಣಿಕವಾಗಿ ತೀರ ಹಿಂದುಳಿದ ಪ್ರದೇಶವಾದ ಮತ್ತು ಕೊಪ್ಪಳದಲ್ಲಿ ಅಪರೂಪಕ್ಕೆ ಸ್ಥಾಪನೆಯಾದ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಬೇಕು.ಇತ್ತೀಚಿಗೆ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಜನರು ನಿಮ್ಮ ಪಕ್ಷದ 5 ಸಂಸದರನ್ನು ಗೆಲ್ಲಿಸಿದ ವಿಷಯವನ್ನು ಮರೆತುಬಿಟ್ಟಿರೇ ?
ಬೀದರ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಶುಲ್ಕದಿಂದ ಉಳಿದಂತೆ, ಕೊಪ್ಪಳದ ವಿಶ್ವವಿದ್ಯಾಲಯವೂ ವಿದ್ಯಾರ್ಥಿಗಳ ಶುಲ್ಕದ ಬೆಂಬಲದಿಂದ ಉಳಿದಿತ್ತು. ಕನ್ನಡದ ಶಾಲೆಗಳನ್ನು ಮುಚ್ಚುತ್ತಾ ಬಂದ ಸರಕಾರ ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿರುವುದು ನಾಚಿಕೆಗೇಡಿನ ಸಂಗತಿ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ನೆರವು ನೀಡಬೇಕಾದದ್ದು ಸರಕಾರದ ಆದ್ಯ ಕರ್ತವ್ಯ ಸರಕಾರವು ಶಿಕ್ಷಣವನ್ನು ಆರ್ಥಿಕ ಮತ್ತು ಲಾಭದ ದೃಷ್ಟಿಯಿಂದ ನೋಡಬಾರದು ಮತ್ತು ಹಣಕಾಸಿನ ತೊಂದರೆ ಮುಂದೆ ಮಾಡಬಾರದು. ಶೈಕ್ಷಣಿಕ ಕ್ಷೇತ್ರವನ್ನು ಸೇವಾ ದೃಷ್ಟಿಯಿಂದ ನೋಡುತ್ತಾ, ಶೈಕ್ಷಣಿಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಲ್ಲವೇ? ಶೈಕ್ಷಣಿಕ ವಿಷಯದಲ್ಲಿ ವ್ಯಾವಹಾರಿಕ ದೃಷ್ಟಿ ಸಲ್ಲದು. ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕಂತೂ ಈ ವಿಚಾರ ಅಪ್ರಸ್ತುತ, ಹಣಕಾಸಿನ ಕೊರತೆ ಕಂಡು ಬಂದ ವಿಶ್ವವಿದ್ಯಾಲಯಗಳಿಗೆ ವಿಶೇಷ ಆರ್ಥಿಕ ನೆರವು ನೀಡಿ, ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳುವುದು ಜಾಣತನದ ನಡೆಯಾಗುತ್ತದೆ. ನೀವು ಹೀಗೆ ಮಾಡದಿದ್ದರೆ ನಿಮ್ಮ ಸಾಮಾಜಿಕ ಸಮಾನತೆಯ ಮಾತುಗಳಿಗೆ ಬೆಲೆ ಇಲ್ಲವಾಗುತ್ತದೆ. ನೀವು ನಿಮ್ಮ ಮಾತಿನ ಪ್ರಕಾರ ಜವಾಬ್ದಾರಿಗಳನ್ನು ನಿರ್ವಹಿಸದಿದ್ದರೆ, ನೀವು ರಾಜಕೀಯದಿಂದ ಹಿಂದೆ ಸರಿಯಬೇಕಾಗುತ್ತದೆ.
ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಕೊಪ್ಪಳ ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನವನ್ನು ಹಿಂಪಡೆಯಬೇಕೆಂದು ಹಿರಿಯ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ ಶೀಲವಂತರ್, ವಿದ್ಯಾರ್ಥಿಗಳಾದ ಪವನ್ ಕುಮಾರ್,ನಾಗರಾಜ ರಾಥೋಡ್,ಜುನುಸಾಬ್ ವಡ್ಡಟ್ಟಿ, ರೈತ ಸಂಘಟನೆಯ ರಾಜ್ಯ ನಾಯಕ ಡಿ,ಹೆಚ್, ಪೂಜಾರ್, ಕೆ,ಬಿ,ಗೋನಾಳ, ಶರಣು ಗಡ್ಡಿ, ನಿವೃತ್ತ ಪ್ರಾಚಾರ್ಯ ಬಿ,ಜಿ,ಕರಿಗಾರ, ಸಾಹಿತಿಗಳಾದ ಎ,ಎಮ್,ಮದರಿ, ಈಶ್ವರ ಹತ್ತಿ, ಕಾಶಪ್ಪ ಚಲವಾದಿ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್,ಎ,ಗಫಾರ್, ಮಖಬೂಲ್ ರಾಯಚೂರು ಮುಂತಾದವರು ಒತ್ತಾಯಿಸಿದರು.